Wednesday, 21 December 2011

ಡಿಸೆಂಬರ್ ತಿಂಗಳ ಯುಗಪುರುಷ ಸಂಪಾದಕೀಯ

ಸಂಪಾದಕೀಯ
ನೇರ ದಾರಿಯಲ್ಲಿ ಕೂಡಿಸಿದ, ಸತ್ಯ ಹಾಗೂ ನ್ಯಾಯದ ರೀತಿಯಲ್ಲಿ ಗಳಿಸಿದ ಹೆರವರ ತೊಂದರೆಗೆ ಕಾರಣವಲ್ಲದ ಸಂಪತ್ತು ಪವಿತ್ರ ಹಾಗೂ ಸುಖಕರವೆನ್ನಲಾಗಿದೆ. ಅಂದರೆ ಅಡ್ಡದಾರಿಯ ಗಳಿಕೆ. ಇತರರ ಕೇಡಿಗೆ ಮೂಲವಾದ ಸಂಪಾದನೆ, ಬೇರೆಯವರನ್ನು ವಂಚಿಸಿ ಕೂಡಿಸಿದ ರೊಕ್ಕ, ಮೋಸದ ಹಣ ಪಾಪ ಪೂರ್ಣ ಅಂತೆಯೇ ದುಃಖಕರವೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಇಂತಹ ಪಾವನ ಧನವನ್ನು ದಾನಧರ್ಮಕ್ಕಾಗಿ, ಸೇವೆ, ಶುಶ್ರೂಶೆಗಳಿಗಾಗಿ ಸದ್ವನಿಯೋಗಿಸುವವನೇ ನಿಜವಾದ ಧನಿಕ ಅಂದರೆ ಸಿರಿವಂತ. ಇಂತಹವನಿಗೆ ಈ ಸಂಪತ್ತು ವರದಾನವೆನ್ನಿಸಿ ಸುಖಸಂತೋಷಗಳಿಗೆ ಮೂಲ ಕಾರಣವಾದೀತು.
ಆದರೆ ಸುಳ್ಳು ಹೇಳಿ ಕೇಡು ಬಗೆದು ಕಳವು ಗೈದು, ಮೋಸವೆಸಗಿ ಸೊತ್ತಿನಲ್ಲಿ ಕಲಬೆರಕೆ ಮಾಡಿ ಗಳಿಸಿದ ಸಂಪತ್ತು ದುಗುಡ ದುಮ್ಮಾನಗಳಿಗೆ ಅಕ್ಕರೆಯ ಕರೆ. ಅಭಿಶಾಪಕ್ಕೆ ಆತ್ಮೀಯ ಆಮಂತ್ರಣ. ನಿಜವಾಗಿಯಾದರೆ  ಹಿರಿಮೆ ಗರಿಮೆಗಳೆಲ್ಲ ಬರುವುದು ನಮ್ಮ ನಿರ್ಮಲವಾದ ನಡೆ-ನುಡಿಗಳಿಂದ ಅಂತೆಯೇ ಧರ್ಮನಿಷ್ಠ ತ್ಯಾಗದಿಂದ. ಬರೇ ಸಿರಿ ರಕ್ಕಸರ ಬಳಿಯೂ ಹೇರಳ ಇರುತ್ತದೆ. ಕಳ್ಳಕಾಕರ ಹಾಗೂ ದರೋಡೆಕೋರರ ಹತ್ತಿರವೂ ಬೇಕಾದಷ್ಟಿರುತ್ತದೆ.
ಆದರೆ ನಿಜವಾದ ಸಂಪತ್ತಿಗೆ ಪವಿತ್ರತೆಯ ಹೊಂಗಳೆ ಮೆರೆಯುವುದು, ಧರ್ಮನಿಷ್ಠೆ, ತ್ಯಾಗತತ್ಪರತೆ ಮತ್ತು ಸದಾಚಾರ ಪ್ರವೃತ್ತಿಗಳಿಂದ ಆ ಧರ್ಮ ನಿಯಂತ್ರಣಕ್ಕೊಳಪಡದ ಸಂಪತ್ತು ಭ್ರಷ್ಟಾಚಾರ ಹಾಗೂ ಅತ್ಯಾಚಾರದಿಂದ ಗಳಿಸಿದ ರೊಕ್ಕ. ಅಂತೆಯೇ ಸಿರಿ ಎಲ್ಲಿರುತ್ತದೋ ಅಲ್ಲಿ ಪಾಪಕೂಪ ಕಲ್ಮಶದ ಕೊಳೆಯಿಂದ ನಾರುತ್ತದೆ. ಅಲ್ಲಿ ನೈತಿಕ ಪತನವಂತೂ ಕಟ್ಟಿಟ್ಟ ಗಂಟಾಗಿ ಕಾಣಿಸುತ್ತದೆ.
ಹಾಗಂತ ಸಿರಿವಂತರಿಗೆ ಸಮಾಜದಲ್ಲಿ ಸಿಗುವ ಗೌರವಾದರಗಳು ಸ್ಥಾನಮಾನಗಳು ಮಹತ್ತ್ವ ಪೂರ್ಣ ಹೌದು. ಸಾಕಷ್ಟು ಹಣವಿದ್ದಾಗ ಎಂತಹ ಘನಘೋರ ಅತ್ಯಾಚಾರ ಮಾಡಿದರೂ ಭ್ರಷ್ಟಾಚಾರ ಗೈದರೂ ಆತ ಸದಾಚಾರಿಯಾಗಿ ಶಿಷ್ಟಾಚಾರಿಯೆನ್ನಿಸಿ ಖ್ಯಾತಿ ಗಳಿಸಬಹುದು ನಿಜ. ಆದರೆ ಇದರಿಂದ ಕಳವು ಸುಲಿಗೆ ದರೋಡೆ ಗೌರವದ ಸಂಗತಿಯಾಗುತ್ತದೆ ಎಂಬುದನ್ನು ಮಾತ್ರ ಮರೆಯಲಾಗದು. ಹಾಗಾಗಿ ಒಬ್ಬನ ಸಿರಿ ಎಂದೆಂದೂ ಆತನ ಗೌರವದ ಮಾನದಂಡವಾಗಬಾರದು. ತ್ಯಾಗ ಸದಾಚಾರ ಹಾಗೂ ಧರ್ಮನಿಷ್ಠೆಯೇ ಸ್ಥಾನಮಾನಗಳನ್ನೀಯುವ ಸಾಧನವಾಗಬೇಕಾಗಿದೆ. ಅದರಲ್ಲೂ ನಮ್ಮಲ್ಲಿರುವ ಸಿರಿ ಭಗವತ್ ಸೇವೆಗಾಗಿ, ಜನತಾ ಜನಾರ್ದನನ ಅರ್ಚನೆಗಾಗಿ, ದೀನದಲಿತರ  ಆರಾಧನೆಗಾಗಿ, ರೋಗ ರುಜಿನಗಳ ನಿವಾರಣೆಗಾಗಿ ಮುಡಿಪಾಗಿರುವಂತಾಗಬೇಕಾಗಿದೆ. ಆಗಲೇ ನಮಗೂ ನಮ್ಮ ಸಿರಿಗೂ ಸಾರ್ಥಕ್ಯ.

Saturday, 15 October 2011

ಶ್ರೀ ತುಳಸೀ ಮಹಿಮಾಮೃತ ಕೃತಿ ಬಿಡುಗಡೆ


ಹಿಂದೂ ಸಂಪ್ರದಾಯದಲ್ಲಿ ತುಳಸೀಗೆ ಬಹು ಪ್ರಾಧಾನ್ಯತೆಯಿದೆ. ತುಳಸೀ ಆರೋಗ್ಯದಾಯಕ. ತುಳಸಿ ಮಹಿಮೆ ಅಪಾರ ಎಂದು ಖ್ಯಾತ ನ್ಯಾಯವಾದಿ, ಲೇಖಕ ಟಿ.ನಾರಾಯಣ ಪೂಜಾರಿಯವರು ಹೇಳಿದರು.
ಅವರು ಇತ್ತೀಚೆಗೆ ಮಂಗಳೂರಿನ ನೆಲ್ಲಿಕಾಯಿ ಮಠದಲ್ಲಿ ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದ 479ನೇ ಕೃತಿ ಬಿ.ಕೆ.ಶ್ರೀಮತಿ ರಾವ್‌ರವರಿಂದ ರಚಿತ ಶ್ರೀ ತುಳಸೀ ಮಾಹಿಮಾಮೃತ ಕೃತಿಯನ್ನು ಬಿಡುಗಡೆಗೊಳಿಸಿ ಮಾತಾಡಿದರು.
ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಸಾಹಿತಿ ಪು.ಶ್ರೀನಿವಾಸ ಭಟ್, ಪೂರ್ಣ ಪ್ರಕಾಶರವರು ಉಪಸ್ಥಿತರಿದ್ದರು.
ಬಿ.ಕೆ.ಶ್ರೀಮತಿ ರಾವ್‌ರವರನ್ನು ಯುಗಪುರುಷದ ವತಿಯಿಂದ ಸನ್ಮಾನಿಸಲಾಯಿತು. ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಸ್ವಾಗತಿಸಿದರು. ಬಿ. ಅಶ್ವತ್ಥಾಮ ರಾವ್, ಬಿ.ಶ್ರೀನಿವಾಸ ಮೂರ್ತಿಯವರು ಕಾರ್ಯಕ್ರಮ ನಿರೂಪಿಸಿದರು.ಐಶ್ವರ್ಯ ಎ.ರಾವ್ ಪ್ರಾರ್ಥಿಸಿದರೆ, ನಂದಿನಿ ಭಟ್ ಧನ್ಯವಾದವಿತ್ತರು.

Wednesday, 12 October 2011

"ಯುಗಪುರುಷ "ದಸರಾ ದೀಪಾವಳಿ ವಿಶೇಷಾಂಕ ಬಿಡುಗಡೆ

ನಿರಂತರವಾಗಿ ಕಳೆದ 65ವರ್ಷಗಳಿಂದ ಪ್ರಕಟಗೊಳ್ಳುತ್ತಿರುವ ಕನ್ನಡ ಮಾಸ ಪತ್ರಿಕೆ "ಯುಗಪುರುಷ" ದ ದಸರಾ-ದೀಪಾವಳಿ ವಿಶೇಷಾಂಕದ ಬಿಡುಗಡೆ ಮಂಗಳವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ನಡೆಯಿತು.
ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣರ ಆಶೀರ್ವಚನದಲ್ಲಿ ಪತ್ರಿಕೆಯ ಗೌರವ ಸಂಪಾದಕಿ ಕೊಡೆತ್ತೂರು ಕಮಲಾಕ್ಷಿ ಉಡುಪ ವಿಶೇಷಾಂಕ ಬಿಡುಗಡೆಗೊಳಿಸಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು, ಗುರುರಾಜ ಉಡುಪ, ಡಾ|ನಯನಾಭಿರಾಮ ಉಡುಪ, ರಾಮಕೃಷ್ಣ ಭಟ್, ಪದ್ಮಾಕ್ಷಿಆರ್.ಭಟ್,ಕೆ.ಜಿ.ಮಲ್ಯ, ಪು.ಶ್ರೀನಿವಾಸ ಭಟ್, ಬಾಲಕೃಷ್ಣ ಉಡುಪ, ಯೋಗೀಶ್ ರಾವ್ ಉಪಸ್ಥಿತರಿದ್ದರು.
ಯುಗಪುರುಷ ಪತ್ರಿಕೆಯ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು.

Monday, 10 October 2011

ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಪಳಕಳ ಸೀತಾರಾಮ ಭಟ್ಟರ ಕಾಡಿನ ಕಣ್ಮಣಿ ಬಿಡುಗಡೆ



ಬಾಲ ಮನೋವಿಜ್ಞಾನಿ, ಮಕ್ಕಳ ಹಿರಿಯ ಸಾಹಿತಿ ಪಳಕಳ ಸೀತಾರಾಮ ಭಟ್ಟರಿಗೆ ಇದೇ ಅಕ್ಟೋಬರ್ 9ರಂದು 80 ವರ್ಷ ತುಂಬಿದ ಸಂದರ್ಭದಲ್ಲಿ ಅವರು ರಚಿತ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಕಾಡಿನ ಕಣ್ಮಣಿ ಕೃತಿಯನ್ನು ಪುತ್ತಿಗೆ ಶ್ರೀ ಸೊಮನಾಥೇಶ್ವರ ದೇವಸ್ಥಾನದಲ್ಲಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ|| ಎಂ. ಮೋಹನ ಆಳ್ವರವರು ಬಿಡುಗಡೆಗೊಳಿಸಿದರು. ಯುಗಪುರುಷದ ವತಿಯಿಂದ ಪಳಕಳರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಂಬಾತನಯ ಮುದ್ರಾಡಿ, ಬಿ.ಚಂದ್ರಯ್ಯ, ವಿ.ಬಿ.ಅರ್ತಿಕಜೆ, ಕೆ.ಜಿ.ಮಲ್ಯ, ಶ್ರೀಮತಿ ಮತ್ತು ಶ್ರೀ ಪಳಕಳ ಸೀತಾರಾಮ ಭಟ್, ಮೂಡಬಿದ್ರೆ ಪತ್ರಕರ್ತರ ಸಂಘದ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹಾಗೂ ಪಳಕಳರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Thursday, 6 October 2011

ಯುಗಪುರುಷ ದಸರಾ-ದೀಪಾವಳಿ ವಿಶೇಷಾಂಕ

ನಿಮ್ಮ ನಿರೀಕ್ಷೆಯ ಯುಗಪುರುಷ ದಸರಾ-ದೀಪಾವಳಿ ವಿಶೇಷಾಂಕ ಸುಮಾರು 250 ಪುಟಗಳಿಗೂ ಮಿಕ್ಕಿ ನಾಡಿನ ಖ್ಯಾತ ಲೇಖಕರ ಬರಹಗಳೊಂದಿಗೆ ಕೆಲವೇ ದಿನಗಳಲ್ಲಿ ದಸರಾ-ದೀಪಾವಳಿ ವಿಶೇಷಾಂಕವಾಗಿ ಪ್ರಕಟಗೊಳ್ಳಲಿದೆ.

Wednesday, 5 October 2011

ಪತ್ರಕರ್ತ ಸ್ಟೀವನ್ ರೇಗೋರವರಿಗೆ ಕೆ.ಜೆ.ಶೆಟ್ಟಿ ಕಡಂದಲೆ ಪ್ರಶಸ್ತಿ ಪ್ರದಾನ


ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಅಕ್ಟೋಬರ್ ೨ರಂದು ಯುಗಪುರುಷ ಕಿನ್ನಿಗೋಳಿ ಹಾಗೂ ವಿಜಯಾ ಕಲಾವಿದರು ಕಿನ್ನಿಗೋಳಿ ಕೊಡಮಾಡಿದ ಕೆ.ಜೆ.ಶೆಟ್ಟಿ ಕಡಂದಲೆ ಪ್ರಶಸ್ತಿ ಪ್ರದಾನ ಸಮಾರಂಭವು ಜರಗಿತು. ಪತ್ರಕರ್ತ ಸ್ಟೀವನ್ ರೇಗೋರವರಿಗೆ ಮಂಗಳೂರಿನ ಸಂದೇಶ ಪ್ರತಿಷ್ಠಾನದ ನಿರ್ದೇಶಕ ರೆ|ಫಾ| ವಲೇರಿಯನ್ ಮೆಂಡೋನ್ಸಾರವರು ಪ್ರಶಸ್ತಿ ಪ್ರದಾನ ಮಾಡಿದರು. ಹರಿಕೃಷ್ಣ ಪುನರೂರುರವರು ಅಧ್ಯಕ್ಷತೆ ವಹಿಸಿದ್ದರು.ಕಟೀಲಿನ ಶ್ರೀ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣರು ಆಶೀರ್ವಚನ ನೀಡಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ಕಿರಣ್ ಮಂಜನಬೈಲು, ರೋಟರಿಯ ಶ್ರೀ ಪಿ.ಸತೀಶ್ ರಾವ್, ಸುರಗಿರಿ ವಾಸು ಶೆಟ್ಟಿ, ಜಗದೀಶ ಶೆಟ್ಟಿ ಕೆಂಚನಕೆರೆ, ಸಾಲೆತ್ತೂರು ಜಯರಾಮ ಶೆಟ್ಟಿ, ಸಾಯಿನಾಥ ಶೆಟ್ಟಿ, ಶ್ರೀ ತಾರಾನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು. ವಿಜಯಾಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನರೇಂದ್ರ ಕೆರೆಕಾಡು ಪ್ರಶಸ್ತಿ ಪತ್ರ ವಾಚಿಸಿದರು. ಲಕ್ಷ್ಮಣ್ ಬಿ.ಬಿ. ವಂದಿಸಿದರು.