Monday, 2 April 2012

ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲದಿಂದ ಪ್ರಕಟಿತ ಎರಡು ಕೃತಿಗಳ ಬಿಡುಗಡೆ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಹಿರಿಯ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ ರಚಿಸಿದ ಇಲಿಯೇ ಹೇಳಿದ್ದು ಮತ್ತು ಆಟಿಕೆಗಳ ಕೂಟದಲ್ಲಿ ಕೃತಿಗಳ ಬಿಡುಗಡೆ ಮೂಡುಬಿದ್ರೆ ಸಮಾಜ ಮಂದಿರದಲ್ಲಿ ಜರಗಿತು. ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಯುಗಪುರುಷದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕೃತಿಗಳನ್ನು ಬಿಡುಗಡೆ ಗೊಳಿಸಿದರು.
ಕೃತಿ ಬಿಡುಗಡೆಗೊಳಿಸಿದ ಅವರು ಸಾಹಿತ್ಯದ ಮೂಲಕ ಮಕ್ಕಳ ಮನಸ್ಸನ್ನು ವಿಕಸನಗೊಳಿಸುವ ಸಾಹಿತ್ಯವನ್ನು ರಚಿಸಿರುವ ಪಳಕಳ ಅವರ ಸಾಹಿತ್ಯ ಸಾಧನೆಯನ್ನು ಸರಕಾರ ಗುರುತಿಸಿಲ್ಲ. ಅವರು ಇನ್ನಷ್ಟು ಕೃತಿಗಳನ್ನು ರಚಿಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲಿ ಎಂದರು. ಕೃತಿಕಾರ ಪಳಕಳ ಸೀತಾರಾಮ ಭಟ್ ಮಾತನಾಡಿ ಮಕ್ಕಳ ಸಾಹಿತ್ಯವನ್ನು ಇಂದು ದ್ವಿತೀಯ ದರ್ಜೆಯ ಸಾಹಿತ್ಯವನ್ನಾಗಿ ಪರಿಗಣಿಸಲಾಗುತ್ತಿದೆ. ಸಾಹಿತ್ಯದ ವೇದಿಕೆಗಳಲ್ಲಿ ಮಕ್ಕಳ ಸಾಹಿತ್ಯದ ಕುರಿತು ಮೆಚ್ಚುಗೆಯ ಮಾತನಾಡುವವರು ಅದಕ್ಕೆ ನ್ಯಾಯ ಒದಗಿಸಿತ್ತಿಲ್ಲ ಎಂದು ಅವರು ವಿಷಾದಿಸಿದರು. ಮೂಡಬಿದ್ರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸಿ.ಕೆ.ಪಡಿವಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಯುಗಪುರುಷದ ವತಿಯಿಂದ ಪಳಕಳರನ್ನು ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಸನ್ಮಾನಿದರು. ಬೋಳಂತಕೋಡಿ ಸಾಹಿತ್ಯ ಪ್ರತಿಷ್ಟಾನದ ಕಿರಣ್ ನಾರಾಯಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಭುವನಾಭಿರಾಮ ಉಡುಪ ಅತ್ಯತ್ತಮ ಗ್ರಂಥಾಲಯ ಹೊಂದಿದ ಶಾಲೆಗಳಿಗೆ ಮಕ್ಕಳ ಪುಸ್ತಕಗಳನ್ನು ಒದಗಿಸುವುದಾಗಿ ಹೇಳಿದರು. ಉಪಾಧ್ಯಕ್ಷ ನವೀನ್ ಸಾಲ್ಯಾನ್ ಸ್ವಾಗತಿಸಿದರು. ಪ್ರೇಮಾಶ್ರೀ ವಂದಿಸಿದರು. ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment